ಕತ್ತಲೆಯ ಕೋಣೆಯಿಂದೆದ್ದು ಬಣ್ದವ ನಾನು
ಬಾಗಿಲನು ತೆರೆದು ಹುಣ್ಣಿಮೆಯ ಸಿರಿಗೆ ;
ದೂರ ಯಾವುದೊ ಹಕ್ಕಿ ಹೆಮ್ಮರದ ಕೊಂಬೆಯಲಿ
ರೆಕ್ಕೆ ಬಡಿಯಿತು ಇರುಳ ಸಂಭ್ರಮದಲಿ.
ಬೆಳಕು ಹರಿಯಿತು, ಹಕ್ಕಿಹಾಡು ಮೊದಲಾಗಿತ್ತು
ಕೊಂಬೆ ತುದಿಯಲಿ ಇದ್ದ ಹಣ್ಣ ಕೆಡವಿ ;
ಬೆಳಗಾಗ ಕಡಲ ತಡಿಗೋಡಿದೆನು ಆತುರದಿ
ಕಂಡೆ ನಾ ಮುನ್ನೀರಿನದ್ಭುತವನು.
ದೋಣಿ ಒಂದೊಂದಾಗಿ ಕಡಲೆದೆಗೆ ನುಗ್ಗಿದವು
ಸಂತಸದಿ ಹಾಡಿದಳು ಕಪ್ಪುಹುಡುಗಿ ;
ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಅದಕ್ಕೆ
ಕಂಡ ನೋಟ ಸಮುದ್ರದಂಥ ಪ್ರಾಣಿ.
ಮುನ್ನೀರ ಘೋಷದಲಿ ಬಾಳ ಹಾದಿಯ ಕಂಡೆ,
ನಾ ಕಂಡೆ ದೋಣಿಗರ ಸಾಹಸವನು ;
ದೂರದೂರದ ದೋಣಿ ಹಾಡ ಕೇಳಿದೆ ನಾನು,
ಎದೆ ತುಂಬ ಪ್ರೀತಿಯನು ತುಂಬಿಕೊಂಡೆ.
ನಾನು ಚುಂಬಿಸಲಾರೆ, ಚುಂಬಿಸದೆ ಇರಲಾರೆ
ಅಡ್ದ ಗೋಡೆಯ ಮೇಲೆ ದೀಪ ನಾನು ;
ನನ್ನ ನಿರ್ಧಾರವನು ಕಡಲ ನೀರಿಗೆ ಬಿಟ್ಟೆ,
ಕಪ್ಪೆಚಿಪ್ಪುಗಳನ್ನು ನೀರಿಗೆಸೆದೆ.
ಹಬ್ಬದೂಟಕ್ಕೆಂದು ಮನೆಗೆ ಬಂದರೆ ನಾನು
ಕೋಣೆಯೊಳಿರಲಿಲ್ಲ ಅಡುಗೆಯವನು ;
ಊಟಕ್ಕೆ ಕರೆದವನು ನಾನೆ, ಬಂದವ ನಾನೆ
ನನ್ನ ಮನೆಗೇ ನಾನು ಒಬ್ಬ ಅತಿಥಿ!.
- ಕೆ ಎಸ್ ನರಸಿಂಹಸ್ವಾಮಿಯವರು.
0 Comments