ಕೀಲಿಗೆಣ್ಣಿಯ ಬಿಟ್ಟು ಎಷ್ಟು ದಿನವಾಯಿತೋ !-
ತೊಟ್ಟಿಲಿನ ಕಿರಿಚು ಅಲ್ಲಿಂದಿಲ್ಲಿಗೆ.
ಅದೆ ತಾಯ ದನಿಯೆಂದು ಯಾರಿದಕೆ ಹೇಳಿದರೊ ?-
ಕಣ್ಣ ಚಾವಣಿ ಬಿತ್ತು ನಿದ್ದೆ - ಮಳೆಗೆ ;
ಮಗುವಿಗೆ ನಿದ್ದೆ ಬಂತು. ಇನ್ನೇಕೆ ತೂಗುವುದು ?
ಕಾರಣವ ಕೊಡಲಿಲ್ಲ ಹೆತ್ತ ಕರುಣೆ.
ಇಲ್ಲ, ತಗುಲಿದ ಗೋಡೆ ಇದನು ತಳ್ಳುವುದೆನಲು,
ಇಟ್ಟಿಗೆಗೆ ಬಂತು ಚಿನ್ನದ ಧಾರಣೆ.
ಕೊಂಡಿ ಕುಣಿಕೆ ಸುಭದ್ರ : ಸರಪಳಿಗಳಿದಬೇಕು,
ಇವೆಯಂತೆ ! ನಾಗೋಸ ನೀಲಗಗನ.
ಮಗು ಮಗ್ಗಲಾಗಿ ನಿದ್ದೆಯಲಿ ಅತ್ತಿರಬೇಕು,
ತೆರೆಯ ನೇವರಿಸುತಿದೆ ಮಂದ ಪವನ.
-ಕೆ ಎಸ್ ನರಸಿಂಹಸ್ವಾಮಿಯವರು.
0 Comments