ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ ;
ಎದ್ದೆ, ಹೊಸಲಿನ ತನಕ ಹೋಗಿ ಬಂದೆ .
ಕಿಟಕಿಯಾಚೆಗೆ ಒಂದು ಚೆಂಗುಲಾಬಿಯ ಕಂಡೆ -
ಅದರ ಮುಳ್ಳೂ ಕೆಂಪು ! ಒಳಗೆ ನೊಂದೆ.
ಗೋಡೆ - ಕನ್ನಡಿಯೊಳಗೆ ಒಂದು ಮುಖವನು ಕಂಡೆ ;
ಅದು ಯಾರದೆನ್ನುವುದು ತಿಳಿಯಲಿಲ್ಲ.
ಅಳಿಲು ಕಚ್ಚಿದ ಕೆಂಪು ದಾಳಿಂಬೆ ಹಣ್ಣಿನಲಿ
ಬಿತ್ತವಿಲ್ಲದ ಹಳದಿ ಗೂಡ ಕಂಡೆ.
ಚೈತ್ರ ಮಾಸದ ಕನಸ ಕಂಡೆ ಆಷಾಡದಲಿ ;
ಚಿಕ್ಕ ಮಕ್ಕಳ ಕಂಡೆ ಹಸಿರ ನಡುವೆ ;
ಕೊಳದ ಕೆಂದಾವರೆಯ ಬಿರಿದ ಮೊಗ್ಗನು ಕಂಡೆ ;
ಮಂದಹಾಸವ ಕಂಡೆ. ನಿನ್ನ ನೆನೆದು.
ನೀನಿರದ ಹುಣ್ಣಿಮೆಯ ನಕ್ಷತ್ರ ಮೌನದಲಿ
ನನ್ನ ವಿರಹಾಗ್ನಿಯನು ಹಾಡಿಕೊಂಡೆ.
ನನ್ನ ಪಾಡಿಗೆ ನನ್ನ ಬಿಡಲು ಒಪ್ಪದ ಲೋಕ
ನನ್ನ ಕಣ್ಣಿಗೆ ಬಂತು ಹನಿಗಳಂತೆ.
ಬಂತು ನೆನಪಿಗೆ ಹಸೆಯ ಮಣೆಯಲ್ಲಿ ನೀನಂದು
ಕರವಸ್ತ್ರವನು ನನಗೆ ಕೊಟ್ಟ ನೆನಪು.
ಒಲವೆಂದರೇನೆಂದು ಕೇಳಲಿಲ್ಲವೆ ನೀನು ?
ಕೇಳಿದಂತೆಯೆ ನನಗೆ ಈಗ ನೆನಪು.
- ಕೆ ಎಸ್ ನರಸಿಂಹಸ್ವಾಮಿಯವರು.
0 Comments