ನಿನ್ನ ಹಾಡಿಗೆ ನಾನು ತಾಳ ಹಾಕಿದ ಸಂಜೆ
ಮುಗಿಲು ಕೆಂಪಾಗಿತ್ತು ಬಾಂದಳದಲಿ;
ನೀನು ಹಾಡನು ಮುಗಿಸಿ ದೀಪ ಹಾಕಲು ಎದ್ದೆ
ತುಂಬ ಕತ್ತಲೆಯಿತ್ತು ಕೋಣೆಗಳಲಿ.
ಮಳೆ ಬಂತು, ದೇಪ ಬರಲೇ ಇಲ್ಲ , ನಾನೆದ್ದೆ
ತಂಬೂರಿಯನು ಒಂದು ಮೂಲೆಗಿರಿಸಿ;
ಸದ್ದಿರದ ತಂತಿಗಳ ಮೇಲೆ ತಂಗಿತು ಮೌನ
ಹೊತ್ತಿಕೊಂಡಿತು ದೀಪ ಕೋಣೆಗಳಲಿ.
ನಿನ್ನ ಕಂಬನಿ ಮಿನುಗಿ ತಂಬೂರು ಝಂಕರಿಸಿ
ಆರಿಹೋಯಿತು ದೀಪ ಹಣತೆಗಳಲಿ;
ಹೊಸತಾದ ಹಾಡು ಕೋಣೆಯ ತುಂಬಿಕೊಂಡಿರಲು
ಬೆಳಕು ಹೊಳೆಯಿತು ಗೋಡೆಕನ್ನಡಿಯಲಿ.
ಚೆಲುವ ಹಾಡಿಗೆ ಒಲವು ಸೇರಿಕೊಂಡು ಬೇಗ
ತುಂಬಿಕೊಂಡಿತು ನಲಿವು ಹೃದಯಗಳಲಿ;
ಬಾನಿನಂಗಳದಲ್ಲಿ ನಕ್ಷತ್ರಗಳು ಹೊಳೆದು
ಹೂವು ಉದುರಿತು ಊರ ಬೇಲಿಗಳಲಿ.
ಬೆಳಗಾಗ ಮನೆಯ ಬಿಟ್ಟವರು ಇರುಳಿಗೆ ಬಂದು
ಚಪ್ಪಾಳೆ ತಟ್ಟಿದರು ನಿನ್ನ ದನಿಗೆ;
ನೀನು ಮೈಮುರಿದೆದ್ದು ನಿನ್ನ ಕೋಣೆಗೆ ಹೋದೆ
ಮುಗಿದ ಹಾಡಿನ ಅರ್ಧ ಬೆಳಕಿನೊಳಗೆ.
-ಕೆ ಎಸ್ ನರಸಿಂಹಸ್ವಾಮಿಯವರು.
0 Comments