ರಾಮ ನಾಮ ಪಾಯಸಕ್ಕೆ
ಕೃಷ್ಣ ನಾಮ ಸಕ್ಕರೆ
ವಿಠ್ಠಲ ನಾಮ ತುಪ್ಪವ ಸೇರಿಸಿ
ಬಾಯ ಚಪ್ಪರಿಸಿರೋ

ಒಮ್ಮಾನ ಗೋಧಿಯ ತಂದು
ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆ ತೆಗೆದು
ಗಮ್ಮಾನೆ ಶಾವಿಗೆ ಹೊಸೆದು

ಹೃದಯವೆಂಬೊ ಮಡಕೆಯಲಿ
ಭಾವವೆಂಬೊ ಎಸರಲಿ
ಬುದ್ಧಿಯಿಂದ ಪಾಕ ಮಾಡಿ
ಹರಿವಾಣಕೆ ಬಡಿಸಿಕೊಂಡು

ಆನಂದ ಆನಂದವೆಂಬೊ ತೇಗು
ಬಂದಿತು ಕಾಣಿರೊ
ಆನಂದ ಮೂರುತಿ ನಮ್ಮ
ಪುರಂದರ ವಿಠ್ಠಲನ ನೆನೆಯಿರೊ